ಕಲಾಪೋಷಕ ಕಲಾವಿದ
ಲೇಖಕರು : ಉದಯವಾಣಿ
ಗುರುವಾರ, ಸೆಪ್ಟೆ೦ಬರ್ 5 , 2013
|
ಚೇವಾರು ಚೆಂಡೆ ಕಮ್ತಿಯವರ ಮನೆ ಹಿಂದೆ ಯಕ್ಷಗಾನ ಕಲಾಲಯವಾಗಿತ್ತು. ಪ್ರಸಿದ್ಧ ಚೆಂಡೆ ವಾದಕರಾಗಿದ್ದ ಚೇವಾರು ರಾಮಕೃಷ್ಣ ಕಾಮತ್, ಮೃದಂಗ ವಾದಕರಾಗಿದ್ದ ಜನಾರ್ದನ ಕಾಮತ್, ಕಲಾವಿದರಾಗಿದ್ದ ಕೇಶವ ಕಾಮತ್, ಗೋಪಾಲ ಕಾಮತ್, ದಿನಕರ ಕಾಮತ್, ಶಂಕರ ಕಾಮತ್, ಚಿದಾನಂದ ಕಾಮತ್ರವರ ಕುಟುಂಬದ ಮೇಳ ಇಲ್ಲಿ ಸದಾ ಸಕ್ರಿಯವಾಗಿತ್ತು. ಚೆಂಡೆ- ಮದ್ದಳೆಯ ನಿನಾದ ಈ ಮನೆಯಲ್ಲಿ ರಾತ್ರಿ ಹಗಲೆನ್ನದೆ ಅನುರಣಿಸಿ ಸುತ್ತ ಮುತ್ತಲು ಕಲಾವಾಸನೆ ಸೂಸುತ್ತಿತ್ತು. ಪ್ರಸಿದ್ಧ ಚೆಂಡೆ ವಾದಕ ಚೇವಾರು ರಾಮಕೃಷ್ಣ ಕಾಮತ್ ಹಲವಾರು ವರ್ಷಗಳ ಕಾಲ ತೆಂಕುತಿಟ್ಟಿನ ಮೇಳಗಳಲ್ಲಿ ಮೇರು ಕಲಾವಿದನಾಗಿ ಮೆರೆದು ಕೀರ್ತಿಶೇಷರಾಗಿರುವರು. ಇವರ ಪುತ್ರ ಚೇವಾರು ಶಂಕರ ಕಾಮತ್ ಚೆಂಡೆ ವಾದಕರು, ಭಾಗವತರಾಗಿಯೂ ಜನಪ್ರಿಯರು.
ರಾಮಕೃಷ್ಣ ಕಾಮತ್ರವರ ತಮ್ಮ ಕೇಶವ ಕಾಮತ್'ರ ಮಗನಾದ ಅವರ ಪುತ್ರ ಚಿದಾನಂದ ಕಾಮತ್ ಬಾಲ್ಯದಲ್ಲಿ ತನ್ನ ದೊಡ್ಡಪ್ಪನವರ ಹಿಮ್ಮೇಳಕ್ಕೆ ಮನೆಯಂಗಳದಲ್ಲಿ ಧಿಗಿಣ ಹೊಡೆಯುತ್ತಿದ್ದರು. ಎಳವೆಯಲ್ಲೇ ಇವರಿಗೆ ಯಕ್ಷಗಾನದ ಮೇಲೆ ಆಸಕ್ತಿ ಬೆಳೆದು ಬಂದಿದೆ. ಸ್ಥಳೀಯ ಜ್ಯೋತಿ ಕಲಾ ವೃಂದದ ಮೂಲಕ ಯಕ್ಷಗಾನ ಮತ್ತು ನಾಟಕಗಳಲ್ಲಿ ಅಭಿನಯಿಸಿ ತಮ್ಮ ಕಲಾ ಪ್ರೌಡಿಮೆಯನ್ನು ಪ್ರದರ್ಶಿಸುತ್ತಿದ್ದರು.
ಚೇವಾರು, ಪುಣಚ ಮತ್ತು ವಿಟ್ಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಉನ್ನತ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿ ಪ್ರತಿಷ್ಠಿತ ಸಂಸ್ಥೆಯಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಶ್ರೀಧರ ಭಂಡಾರಿಯವರ ಸಂಚಾಲಕತ್ವದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಬೆಂಗಳೂರಿಗೆ ಆಗಮಿಸಿದ್ದಾಗ ಯಕ್ಷಗಾನದ ಆಸಕ್ತಿ ಚಿಗುರೊಡೆಯಿತು. ಮತ್ತೆ ಗೆಜ್ಜೆ ಕಟ್ಟಿ ಕುಣಿಯಲು ಆರಂಭಿಸಿದರು. ಹವ್ಯಾಸಿ ಕಲಾವಿದನಾಗಿ ಕಿರೀಟ ತೊಟ್ಟು ತನ್ನ ಪ್ರತಿಭೆಯನ್ನು ಪ್ರಕಟಿಸಿದರು. ಇವರ ಬಭುವಾಹನ, ಅರ್ಜುನ, ಶಂಖಾಸುರ, ಖರಾಸುರ, ಮುರಾಸುರ, ದೇವೇಂದ್ರ ಮೊದಲಾದ ಪಾತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.
|
ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಸಂಚಾಲಕ ಪುತ್ತೂರು ಶ್ರೀಧರ ಭಂಡಾರಿಯವರೊ೦ದಿಗೆ ಚೇವಾರು ಚಿದಾನಂದ ಕಾಮತ್
|
ಉದ್ಯಾನ ನಗರಿಯಲ್ಲಿ ಉನ್ನತ ಉದ್ಯೋಗಿಯಾಗಿರುವ ಚಿದಾನಂದ ಕಾಮತರು ಬೆಂಗಳೂರು ಆಸುಪಾಸಿನ ಗ್ರಾಮಾಂತರ ಪ್ರದೇಶದ ಜನತೆಗೆ ಯಕ್ಷಗಾನ ಕಲೆಯನ್ನು ಪರಿಚಯಿಸುವ ಸದುದ್ದೇಶದಲ್ಲಿ ಸಕ್ರಿಯರಾಗಿದ್ದಾರೆ. ಅದಕ್ಕಾಗಿ ಯಕ್ಷ ಸಿಂಚನ ವೆಂಬ ಸಂಸ್ಥೆಯನ್ನೂ ಹುಟ್ಟು ಹಾಕಿದ್ದಾರೆ. ಕಳೆದ ನಾಲ್ಕು ವರ್ಷ ಗಳಿಂದ ಪ್ರಸಿದ್ಧ ಹವ್ಯಾಸಿ ಹಾಗೂ ವೃತ್ತಿಪರ ಕಲಾವಿದರನ್ನು ಆಮಂತ್ರಿಸಿ ಅನೇಕ ಯಕ್ಷಗಾನ ಪ್ರಸಂಗಗಳನ್ನು ಏರ್ಪಡಿಸಿ ದ್ದಾರೆ. ಮಳೆಗಾಲದಲ್ಲಿ ಬೆಂಗಳೂರಿಗೆ ಯಕ್ಷ ಪ್ರದರ್ಶನಕ್ಕೆ ಆಗಮಿಸುವ ಕಲಾವಿದರಿಗೆ ಇವರದು ರಾಜಾತಿಥ್ಯ.
ತಾನು ಸ್ಥಾಪಿಸಿದ ಯಕ್ಷ ಸಿಂಚನ ಸಂಸ್ಥೆಯ ಮೂಲಕ ಕಲೆ ಮತ್ತು ಕಲಾವಿದರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಹೃದಯ ಶ್ರೀಮಂತಿಕೆ ಯನ್ನು ಹೊಂದಿರುವ ಸರಳ ಸಜ್ಜನ, ನಿಗರ್ವಿ ಚಿದಾನಂದ ಕಾಮತ್ರ ಕಲಾಸೇವೆ ಮತ್ತು ಸಮಾಜ ಸೇವೆ ಇನ್ನಷ್ಟು ಬೆಳಗಲಿ.
ಕೃಪೆ : http://www.udayavani.com
|
|
|